ಭಾನುವಾರ, ಮಾರ್ಚ್ 30, 2014

ಹಣ್ಣು-ಹಣ್ಣು ಮುದುಕಿ







ಅರವತ್ತೆರಡು ವರ್ಷದ ವೆಂಕಮ್ಮ ರಸ್ತೆಯಲ್ಲಿ ನಿಧಾನವಾಗಿ ನಡೆದು ಬರುತ್ತಿದ್ದರೆ , ಅದು ಹೆಗಡೇರ ಮನೆಗೇ ಎಂದು ಎಲ್ಲರಿಗೂ ಗೊತ್ತಿತ್ತು. ಬೆನ್ನು ಗೂನಾಗಿ , ಕಣ್ಣು ಮಂಜಾದರೂ ಉತ್ಸಾಹವೇನು ಕುಂದಿರಲಿಲ್ಲ. ಹೆಗಡೇರ ಮನೆ ಕೆಲಸವೆಂದರೆ ಯಾವಾಗಲೂ ರೆಡಿ.
ಆಗ ಹೆಗಡೇರ ಮನೆಯಲ್ಲಿ ಸಂಭ್ರಮದ ವಾತಾವರಣ. ಗಜಾನನ ಹೆಗಡೇರ ಮೊಮ್ಮಗಳು ವಿಲಾಸಿನಿಗೆ ಹೆಣ್ಣುಮಗುವಾಗಿತ್ತು. ಮನೆಗೆ ಮಹಾಲಕ್ಷ್ಮಿಯೇ ಬಂದಿದ್ದಾಳೆಂಬುದು ಗಜಾನನ ಹೆಗಡೇರ ಅಂಬೋಣ. ಮಗುವನ್ನು ಎತ್ತಿ ಆಡಿಸುವ ವಯಸಲ್ಲದಿದ್ದರೂ ಸಾಯುವುದಕ್ಕಿಂತ ಮೊದಲು ಮಿಮ್ಮಗಳನ್ನು ನೋಡಿದ ಖುಷಿ ಅವರಿಗಿತ್ತು. ಆಗ ಜೂಲೈ ತಿಂಗಳು ಬೇರೆ. ಮಳೆಯೂ ಸಾಕಷ್ಟು ಬಿದ್ದಿತ್ತು. ಗದ್ದೆ ನೆಟ್ಟಿಯ ಸಮಯವದು. ಭತ್ತದ ಗದ್ದೆಗೆ ಮಳೆಯ ನೀರೇ ಆಧಾರವಾದ್ದರಿಂದ ಮಳೆ ಬಂದಾಗಲೇ ಗದ್ದೆ ಹೂಟಿ ಮಾಡಿ ಸಸಿ ನೆಡಬೇಕಾದ ಅನಿವಾರ್ಯತೆಯಿತ್ತು. ಹೀಗಾಗಿ ಆ ಸಮಯದಲ್ಲಿ ಮನೆಗೆಲಸಕ್ಕೆಂದು ಹೆಣ್ಣಾಳುಗಳು ಸಿಗುವುದು ಕಷ್ಟಸಾಧ್ಯವೇ. ಆದರೆ ಕೆಲಸದ ಆಳಿಲ್ಲದೇ ವಿಲಾಸಿನಿಯ ಬಾಳಂತನ  ಮಾಡುವುದೇನು ಸುಲಭದ ಮಾತಾಗಿರಲಿಲ್ಲ. ತಾಯಿಯಿಲ್ಲದ ಮಗಳು ವಿಲಾಸಿನಿ. ವಿಲಾಸಿನಿ ಚಿಕ್ಕವಳಿದ್ದಾಗಲೇ ತಾಯಿ ತೀರಿಕೊಂಡಿದ್ದರು. ಈಗ ಬಾಳಂತನ ಮಾಡುವ ಜವಾಬ್ದಾರಿಯೆಲ್ಲಾ ಅಜ್ಜಿ ಗಂಗಮ್ಮನ ಮೇಲಿತ್ತು. ಗಂಗಮ್ಮಳೇನು ಕಡಿಮೆ ಸಾಮಾನ್ಯದ ಹೆಣ್ಣಲ್ಲ. ಮಕ್ಕಳು ಮೊಮ್ಮಕ್ಕಳದ್ದೆಲ್ಲ ಸೇರಿ ಸುಮಾರು ಹದಿನೈದು ಬಾಳಂತನ ಮಾಡಿದ ಅನುಭವವಿತ್ತು. ಊರಿನ ನರ್ಸ್ ಬಾಯಿಯ ಜೊತೆ ಸೇರಿ ಐದಾರು ಹೆರಿಗೆ ಕೂಡ ಮಾಡಿಸಿದ್ದ ಗಡಸುಗಿತ್ತಿ ಅವಳು. ಆದರೆ ವಯಸ್ಸೆಂಬುದು ನಿಲ್ಲಬೇಕಲ್ಲ. ಗಂಗಮ್ಮನಿಗೂ ಈಗ ಅರವತ್ತಾಗಿತ್ತು. ಬಾಳಂತನವೆಂದರೇನು ಸಾಮಾನ್ಯದ ಕೆಲಸವೇ, ತಾಯಿ-ಮಗುವನ್ನು ಮೀಯಿಸಿ , ಅವರ ಬಟ್ಟೆ ತೊಳೆದು, ಬಾಳಂತಿಯ ಔಷಧಿಗಳನ್ನು ಮಾಡಿಕೊಟ್ಟು ಆರೈಕೆ ಮಾಡುವಷ್ಟರಲ್ಲಿ ಕೈಕಾಲು ಬಿದ್ದು ಹೋಗುತ್ತಿತ್ತು.
ಆಗ ಗಂಗಮ್ಮನಿಗೆ ನೆನಪಾದದ್ದೇ ವೆಂಕಮ್ಮ. ವಿಲಾಸಿನಿ ಹುಟ್ಟಿದಾಗಲೂ ವೆಂಕಮ್ಮನೇ ಅಲ್ಲವೇ ನೆರವಾದದ್ದು. ಈಗಲೂ ಹಾಗೋ ಹೀಗೋ ಬಂದು ನೆರವಾಗುತ್ತಾರೆಂದು ವೆಂಕಮ್ಮನನ್ನು ಬರಹೇಳಿದ್ದರು.
“ಅಮ್ಮಾ ಈ ಮುದಿ ಜೀವದ ನೆನಪು ಈಗಾದ್ರೂ ಆಯ್ತಲ್ವ್ರಾ... ವಿಲಾಸಿನಿ ಅಮ್ಮೋರು- ಮಗಿ ಎಲ್ಲ ಹುಷಾರಾಗಿದ್ರ್ಯಾ.. ಎಂತ ಹೇಳಿ ಬಪ್ಪುಕೆ ಹೇಳಿದ್ರಂತೆ.... “
“ವೆಂಕಮ್ಮ ನೀನೆ ಅಲ್ವನೆ ಇಂತಾ ಕಾಲದಲ್ಲಿ ನೆನಪಾಗುದು, ವಿಲಾಸಿನಿ ಬಾಳಂತನ ಮಾಡುಕೆ ನನ್ನ ಒಬ್ನಹತ್ರೆ ಸಾಧ್ಯ ಇಲ್ಲೇ , ದಿವಸಾ ಬಂದು ತಾಯಿ ಮಗಿನ ಬಟ್ಟೆ ತೊಳದು , ಅವರ್ನ ಮೀಸುಲ್ಲೆ ಸಹಾಯ ಮಾಡಿದ್ರೆ ನಿನ್ನಿಂದ ದೊಡ್ಡ ಉಪಕಾರ ಆಗ್ತಿತ್ತು ಮಾರಾಯ್ತಿ. ಈ ವಯಸ್ಸಲ್ಲಿ ಹೇಳಲಿಕ್ಕೆ ಬಾಯಿ ಬರ್ಲಿಲ್ಲ ಆದ್ರೆ ಬೇರೆ ಉಪಾಯ ಇಲ್ಲ, ಎಂತ ಮಾಡುದು ಹೇಳು.. ಈ ಸುಟ್ಟ ಗದ್ದೆ ನೆಟ್ಟಿ ಕಾಲದಲ್ಲಿ ಯಾರೂ ಸಿಗದೆ ನಿನ್ನ ಕರೆಯೊ ಪರಿಸ್ಥಿತಿ ಬಂತು “ ಗಂಗಮ್ಮ ಮರುಗಿದ್ದರು.
“ಸರಿ ಅಮ್ಮೋರೆ ವಿಲಾಸಿನಿ ಅಮ್ಮೋರು ನನ್ನ ಮೊಮ್ಮಗಳಿದ್ದಂಗಲ್ವ್ರಾ .. ಬತ್ತೆ ಬಿಡಿ “
“ನಾಳೆ ಬೆಳಗಪ್ಪಾಗೆ ಬಂದುಬಿಡು ಹಂಗರೆ “ ಗಂಗಮ್ಮನ ಕಣ್ಣಲ್ಲಿ ಕೃತಜ್ನತೆಯ ಭಾವವಿತ್ತು. ಆಗ ವೆಂಕಮ್ಮನ ಕಣ್ಣಲ್ಲೂ ಅದೇ ಭಾವ.
ಅದಕ್ಕೂ ಕಾರಣವಿಲ್ಲದಿಲ್ಲ. ಹುಟ್ಟಿನಿಂದಲೂ ವೆಂಕಮ್ಮನ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಚಿಕ್ಕ ಗುಡಿಸಲೇ ಅರಮನೆ. ಅಮ್ಮ ಕೂಲಿ ನಾಲಿ ಮಾಡಿಬಂದ ಕಾಸಿನಲ್ಲೇ ಜೀವನ. ಕುಡಿದು ಬಂದ ಅಪ್ಪ, ಅಮ್ಮನಿಗೆ ಹೊಡೆಯುವುದನ್ನು ನೋಡಿ ಹೆದರುವುದರಲ್ಲೇ ಬಾಲ್ಯ ಮುಗಿದಿತ್ತು. ಯೌವನಕ್ಕೆ ಬಂದೊಡನೆಯೇ ಪಕ್ಕದೂರಿನ ಗಿರಪ್ಪನ ಮಗ ಕೃಷ್ಣಪ್ಪನ ಜೊತೆ ಮದುವೆ ನಿಶ್ಚಯಿಸಿದ್ದರು. ಕೃಷ್ಣಪ್ಪ ಲಾರಿ ಓಡಿಸುತ್ತಿದ್ದರಿಂದ ವರದಕ್ಷಿಣೆಯನ್ನೂ ಸ್ವಲ್ಪ ಹೆಚ್ಚೇ ಕೇಳಿದ್ದರು. ಕಾಡಿ ಬೇಡಿ, ಸಾಲಮಾಡಿ ಮಗಳ ಮದುವೆ ಮಾಡಿದ್ದ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾಗಿ ಎರಡು ವರ್ಷದಲ್ಲೇ ರಸ್ತೆ ಅಫಘಾತದಲ್ಲಿ ಕೃಷ್ಣಪ್ಪ ತೀರಿಕೊಂಡಿದ್ದ. ಸಣ್ಣ ವಯಸ್ಸಿನಲ್ಲೇ ವಿಧವೆಯಾಗಿದ್ದ ವೆಂಕಮ್ಮನ ಬಾಳು ಬೀದಿಗೆ ಬಂದಿತ್ತು. ದಿಕ್ಕು ತೋಚದ ವೆಂಕಮ್ಮ ಬೇರೆ ಉಪಾಯವಿಲ್ಲದೆ ಗಂಟು ಮೂಟೆ ಕಟ್ಟಿಕೊಂಡು ಉಟ್ಟ ಬಟ್ಟೆಯಲ್ಲೇ ಊರು ಬಿಟ್ಟಿದ್ದಳು.  ಘಟ್ಟದ ಮೇಲೆ ಕೆಲಸ ಹುಡುಕಿಕೊಂಡು ಕುಂದಾಪುರದಿಂದ ಬಂದಿದ್ದ ವೆಂಕಮ್ಮನಿಗೆ ಕೆಲಸ ಕೊಟ್ಟು, ತಮ್ಮ ಬೆಟ್ಟದಲ್ಲೇ ಗುಡಿಸಲನ್ನು ಮಾಡಿಸಿಕೊಟ್ಟಿದ್ದು ಗಜಾನನ ಹೆಗಡೇರೇ. ಉಣ್ಣಲು ಹಿಡಿ ಹಿಟ್ಟೂ ಇಲ್ಲದ ಕಾಲದಲ್ಲಿ ತಮ್ಮ ಮನೆಯ ಹಿತ್ಲಾಕಡಿಯಲ್ಲಿ ವೆಂಕಮ್ಮನ ಪೂರ್ತಿ ಸಂಸಾರಕ್ಕೂ ಊಟ ಹಾಕಿದ್ದವರು ಇದೇ ಗಂಗಮ್ಮ. ಮಗಳು ನಿಂಗವ್ವನ ಮದುವೆ ಸಮಯದಲ್ಲಿ ಅಕ್ಕಿ ಕಾಯಿಯಿಂದ ಹಿಡಿದು ಪಾತ್ರೆ , ಸೀರೆಗಳವರೆಗೆ ಸಾಮಾನುಗಳು ಹೆಗಡೇರ ಮನೆಯಿಂದಲೇ ಬಂದಿದ್ದವು. ಕಷ್ಟ ಕಾಲದಲ್ಲಿ ಯಾವಾಗ ದುಡ್ಡು ಬೇಕೆಂದರೂ ಇಲ್ಲವೆಂದು ಹೇಳಿರಲಿಲ್ಲ ಹೆಗಡೇರು. ಅಂಥವರ ಮನೆ ಕೆಲಸಕ್ಕೆ ಕರೆದಾಗ ಇಳಿವಯಸ್ಸಿನಲ್ಲೂ ತನ್ನೆಲ್ಲ ನೋವು, ಕಷ್ಟ, ಬಡತನವನ್ನೆಲ್ಲ ಬದಿಗಿಟ್ಟು  ಸೊಂಟ ಬಗ್ಗಿಸಿ ಸಾವಕಾಶವಾಗಿ ಹೆಗಡೇರ ಮನೆಯೆಡೆಗೆ ಹಣ್ಣು-ಹಣ್ಣು ಮುದುಕಿ ವೆಂಕಮ್ಮ ಹೆಜ್ಜೆಯಿಟ್ಟಿದ್ದರು. 


ಶನಿವಾರ, ಮಾರ್ಚ್ 8, 2014

ಮೂಗುತಿ ಸುಂದರಿ ಭಾಗ-2

ಮೂಗುತಿ ಸುಂದರಿ ಭಾಗ-1 ಇಲ್ಲಿದೆ.http://vasukihegde.blogspot.in/2014/03/blog-post.html



ಮೂಗುತಿ ಸುಂದರಿ ಭಾಗ-2 

ವೈಶಾಲಿ ನಾನು ನಿನ್ನ ಹತ್ರ ಎಂತೋ ಹೇಳಕ್ಕಾಗಿತ್ತು”
“ಹಂ ಹೇಳು “
“ನಂಗೆ ಮನೇಲಿ ಗಂಡು ಹುಡುಕ್ತಾ ಇದ್ದ “
“ವಾವ್ ಹೌದನೇ ... ಮಸ್ತಲೆ..”
“ಆದರೆ ನಾನು ರವಿನಾ ಪ್ರೀತಿಸ್ತಾ ಇದ್ದಿ.... <3 ನಂಗೆ ಅವನ ಕಂಡರೆ ಇಷ್ಟಾ”
“ಅಯ್ಯೋ ಹೌದನೇ ಹೇಳಿದ್ದೇ ಇಲ್ಲ್ಯಲೆ ಮತೆ “
ಒಳಗೊಳಗೇ ಉರಿಯುತ್ತಿದ್ದ ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತಾ ವೈಶಾಲಿ ಕವಿತಾಳಿಗೆ ಹೇಳಿದ್ದಳು. ನಂತರ ರವಿಗೆ ಎಲ್ಲ ವರದಿ ಒಪ್ಪಿಸಿದ್ದಳು.

ರವಿ ಕವಿತಾಳನ್ನು ಯಾವತ್ತೂ ಆ ದೃಷ್ಟಿಯಿಂದ ನೋಡಿದವನೆ ಅಲ್ಲ.ಮುಂದಿನ ಗುರುವಾರ ಕವನ ತೆಗೆದುಕೊಂಡು ಹೋಗಲು ಬರದೇ ಇದ್ದಾಗಲೇ ಅನುಮಾನದ ವಾಸನೆ ಹೊಡೆದಿದ್ದು.
“ವೈಶೂ ರವಿ ಎಂತಕ್ಕೆ ಬಂಜನೆ ಇಲ್ಲ್ಯೆ ??”
“ನಂಗೂ ಗೊತ್ತಿಲ್ಲೆ.. ನಾನು ಅವನ್ನ ನೋಡದೇ ಸುಮಾರು ದಿನ ಆತು “
ಕಡ್ಡಿ ಎತ್ತಿಟ್ಟಂತೆ ಸುಳ್ಳು ಹೇಳಿದ್ದಳು ವೈಶಾಲಿ. ಅಂದು ಬಾರದ ರವಿ ಮತ್ತೆಂದೂ ಬರಲೇ ಇಲ್ಲ. Whatssapp , facebook ನಲ್ಲೂ ಉತ್ತರವಿಲ್ಲ. ಒಂದೆರಡು ಸಲ ಕಾಲೇಜ್ ನಲ್ಲಿ ಸಿಕ್ಕಾಗಲೂ ಸುಮ್ಮನೆ ನಕ್ಕು ಸರಸರನೆ ನಡೆದುಬಿಟ್ಟಿದ್ದ. ವಿಧಿಯಿಲ್ಲದೆ ಕವಿತಾ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಗೆ ಒಪ್ಪಿಕೊಂಡಳು. ರವಿಗೆ ಮದುವೆ invitation ಕೊಡೋಣವೆಂದರೂ ಸಿಗದಾಗ ಬೇಜಾರಾಗಿ ಅತ್ತು ಸುಮ್ಮನಾಗಿದ್ದಳು.

ಇದೆಲ್ಲದರ ನಡುವೆ ವೈಶಾಲಿ-ರವಿಯ ಪ್ರೀತಿ ಹೆಮ್ಮರವಾಗಿ ಬೆಳೆದಿತ್ತು. ಆಗ ವೈಶಾಲಿ ಫೈನಲ್ ಇಯರ್. ರವಿ ಏನೋ ಬಿಸಿನೆಸ್ ಮಾಡ್ತೀನಿ ಅಂತ ಇಡೀ ದಿನ ಶಿರಸಿ ಪೇಟೆ ತಿರುಗಾಡುತ್ತಿದ್ದ. ಬಿಸಿನೆಸ್ ಏನು ಅಂತ ವೈಶಾಲಿ ಕೇಳಲೂ ಇಲ್ಲ ರವಿ ಹೇಳಲೂ ಇಲ್ಲ. ಬಿ‌ಏ ನಂತರ ಎಮ್‌ಏ ಮಾಡಿ ಕನ್ನಡ ಲೆಕ್ಚರರ್ ಆಗಬೇಕೆನ್ನುವುದು ವೈಶಾಲಿ ಚಿಕ್ಕಂದಿನಿಂದಲೂ ಹೆಣೆಯುತ್ತ ಬಂದ ಕನಸು. ರವಿಯ ಒಪ್ಪಿಗೆಯೂ ಸಿಕ್ಕಮೇಲೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಮ್‌ಏ ಯನ್ನೂ ಮುಗಿಸಿದ್ದಾಯ್ತು. ಆದರೆ ರವಿಯ ಬಿಸಿನೆಸ್ ನದ್ದು ಮಾತ್ರ ಪತ್ತೆಯೇ ಇರಲಿಲ್ಲ. ಶಿರಸಿಯ ಯಾವ ಕಾಲೇಜ್ ನಲ್ಲಿಯೂ ಕನ್ನಡ ಪ್ರಾಧ್ಯಾಪಕರ ಪೋಸ್ಟ್ ಖಾಲಿ ಇಲ್ಲದ ತರುವಾಯ ವೈಶಾಲಿ ಉಡುಪಿಯ ಎಂ.ಜಿ.ಎಂ. ಕಾಲೇಜ್ ಗೆ ಅರ್ಜಿ ಸಲ್ಲಿಸಿದ್ದಳು.ಅದೃಷ್ಟವಶಾತ್ ಅಲ್ಲಿ ಕೆಲಸ ಸಿಕ್ಕಿಯೇ ಬಿಟ್ಟಿತು.

ಆಗಲೇ ಶುರುವಾಗಿತ್ತು ಗೊಂದಲದ ಗೂಡು.ಮದುವೆ ವಯಸ್ಸು ಮೀರುತ್ತಿರುವ ಹುಡುಗಿ ದೂರದ ಉಡುಪಿಗೆ ಹೋಗಿ ಕೆಲಸ ಮಾಡುತ್ತಾಳೆಂದರೆ ಯಾವ ತಂದೆ ತಾಯಿ ತಾನೇ ಒಪ್ಪಿಯಾರು ? ಅಪ್ಪ ಬಿಲ್ಕುಲ್ ಬೇಡ ಅಂದುಬಿಟ್ಟರು. ಆದರೆ ವೈಶಾಲಿಯದ್ದು ಬಿಡದ ಹಠ. ತಾನು ಹೋಗಿಯೇ ತೀರುತ್ತೇನೆಂದು ಹಠ ಹಿಡಿದು ಶಿರಸಿ-ಉಡುಪಿ ಬಸ್ ಹತ್ತಿಯೇ ಬಿಟ್ಟಳು. ಅತ್ತ ಮನೆಯವರ ವಿರೋಧವಾದರೆ ಇತ್ತ ರವಿಗೂ ಇವಳು ಉಡುಪಿಯಲ್ಲಿ ಕೆಲಸ ಮಾಡುವುದು ಸುತಾರಾಂ ಇಷ್ಟವಿರಲಿಲ್ಲ. “ ಇಟ್ಸ್ ಮೈ ವೇ ಆರ್ ಹೈ ವೇ” ವ್ಯಕ್ತಿತ್ವದ ವೈಶಾಲಿಯ ನಿಲುವಿಗೆ ಯಾರ ವಿರೋಧವೂ ಸಾಟಿಯಾಗಲಿಲ್ಲ.
ಎಷ್ಟೆಂದರೂ ಗೊತ್ತಿಲ್ಲದ ಊರಿನಲ್ಲಿ ಒಂಟಿಹೆಣ್ಣು ಪಡಬೇಕಾದ ಕಷ್ಟಗಳಿಗೆ ಲೆಕ್ಕವಿಲ್ಲ. ವೈಶಾಲಿಯೇನು ಇದಕ್ಕೆ ಹೊರತಾಗಲಿಲ್ಲ. ದೊರದ ಸಂಬಂಧಿ ಮಾವನ ಮನೆಯಲ್ಲಿ ಒಂದು ವಾರ ಇದ್ದರೂ ನಂತರ ರೂಂ ಹುಡುಕಲೇ ಬೇಕಾಯಿತು. ಹೊಸ ಜಾಗ, ಹೊಸ ಕೆಲಸ, ಖಾಲಿ ಹೊಟ್ಟೆ ಜೀವನದಲ್ಲಿ ನಮಗೆ ತುಂಬಾ ಪಾಠವನ್ನು ಕಲಿಸುತ್ತದೆ. ಅಪರಿಚಿತರ ನಡುವೆ ಒಂಟಿಯಾಗಿ ಹೋದಳು ವೈಶಾಲಿ.

ಹೀಗಿರುವಾಗ ಒಂದುದಿನ ಕಾಲೇಜಿನ ಬಸ್ ಸ್ಟಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೈಶಾಲಿಗೆ ಕಂಡಿದ್ದು ದೂರದಿಂದ ಕೈಬೀಸುತ್ತಿದ್ದ ರವಿ. ಬರಡು ಭೂಮಿಗೆ ಮಳೆಯ ಸಿಂಚನವಾಗಿತ್ತು. ಮನಸು ಹಕ್ಕಿಯಂತೆ ಹಾರಾಡಿತ್ತು. ಓಡಿಹೋಗಿ ರವಿಯನ್ನು ತಬ್ಬಿಕೊಂಡಳು. ರವಿಯೂ ಅವಳನ್ನು ಬರಸೆಳೆದು ಅಪ್ಪಿಕೊಂಡ. ಉಡುಪಿಯ ಅಪರಿಚಿತರ ನಡುವೆ ತನ್ನನ್ನು ತನ್ನವರನ್ನೇ  ಮರೆತಿದ್ದ ವೈಶಾಲಿಗೆ ಪ್ರೀತಿಯ ಅಪ್ಪುಗೆ ಆಪ್ಯಾಯಮಾನವೆನಿಸಿತ್ತು. ಸೀದಾ ಮಲ್ಪೆ ಬೀಚ್ ಗೆ ಹೋಗಿ ಬಾಯಿ ಮುರಿಯುವಷ್ಟು ಮಾತಾಡಿ, ಅಲ್ಲೇ ಸೂರ್ಯಾಸ್ತದ ಆನಂದ ಸವಿದಿದ್ದರು ಜೋಡಿ ಹಕ್ಕಿಗಳು.

ಪ್ರೀತಿಯಲ್ಲೇ ಮುಳುಗಿದ್ದ ವೈಶಾಲಿಗೆ ರವಿಯ, ತನ್ನ ಭವಿಷ್ಯದ ಬಗ್ಗೆ ಯೋಚನೆಯೇ ಇರಲಿಲ್ಲ. ರವಿ ಜೀವನದಲ್ಲಿ ಏನಾದರೂ ಸಾಧಿಸುತ್ತಾನೆಂಬ ಕುರುಡು ನಂಬಿಕೆ ಅವಳಿಗೆ. ರವಿಗೋ ಅದ್ಯಾವುದರ ಚಿಂತೆಯೇ ಇಲ್ಲ. ರವಿವಾರ ಮನೆಗೆ ಹೋಗಿ ಮದುವೆ ಪ್ರಸ್ತಾಪ ಮಾಡಿದಾಗ ವೈಶಾಲಿಯ ತಂದೆಯ ಕಣ್ಣು ಕೆಂಪಗಾಗಿ ಹಣೆಯಲ್ಲಿ ನೂರು ನೆರಿಗೆ ಮೂಡಿತ್ತು.

ಎಷ್ಟು ಸೊಕ್ಕಾಗಿಕ್ಕು ಕೂಸಿಗೆ, ಎಂಗ ಎಂತ ಸತ್ತು ಹೋಜ್ವನು.. ಅಪ್ಪ ಹೇಳಿ ಒಂದು ಮರ್ಯಾದಿ ಬ್ಯಾಡದ ಹಂಗರೆ.. ಸಲುಗೆ ಕೊಟ್ಟಿದ್ದ ನಾಯಿ ನಸಲು ನೆಕ್ಕಿತ್ತಡ.” ಛಟೀರನೆ ಕೆನ್ನೆಗೊಂದು ಏಟು ಬಾರಿಸಿದ್ದರು.
ಅಪ್ಪಯ್ಯ ನಾನು ಮದುವೆ ಆಗದಿದ್ರೆ ರವಿನೆಯ.. ಇಲ್ದೇ ಇದ್ರೆ ನಂಗೆ ಮದುವೇನೆ ಬ್ಯಾಡಾ..” ಮತ್ತೆ ಹಠ ಹಿಡಿದಿದ್ದಳು ವೈಶಾಲಿ.
ಆ ಪೋಲಿ ರವಿ ಎಂತಾ ಕೆಲಸ ಮಾಡ್ತಾ ಹೇಳಿ ಅವಂಗೆ ಹೆಣ್ಣು ಕೊಡವು ?
“ಒಂದು ದಿನ ಅವಾ ದೊಡ್ಡ ಬಿಸಿನೆಸ್ ಮ್ಯಾನ್ ಆಗಿ ತೋರಸ್ತ ಎಲ್ಲರಿಗುವಾ .“
“ಹ್ಮ ಕನಸು ಕಾಣು ನೀನು.. ಎಂತಾರು ಮಾಡ್ಕ್ಯಂದು ಸಾಯಿ ನೀನು.. ಅಪ್ಪ ದುರುದುರನೆ ಹೊರನಡೆದರು. ಆದರೆ ಎಷ್ಟೆಂದರೂ ಮಗಳಲ್ಲವೇ , ಕೊನೆಗೂ ಮದುವೆಗೆ ಒಪ್ಪಿದ್ದರು.
ರವಿಯ ಮನೆಯಲ್ಲಂತು ಹಬ್ಬದ ವಾತಾವರಣ. ಈ ಪೋಲಿ ರವಿಗೆ ಮದುವೆಯೇ ಆಗಲ್ಲ ಅಂದುಕೊಂಡವರಿಗೆ ಅತ್ಯಾಶ್ಚರ್ಯ.

ಆದರೆ ವೈಶಾಲಿಯ ಕೆಲಸ ಉಡುಪಿಗೆ ಅವಳನ್ನು ಕೈಬೀಸಿ ಕರೆಯುತ್ತಿತ್ತು. ಕೆಲಸವಿಲ್ಲದ ಗಂಡನನ್ನು ಸಾಕುವ ಜವಾಬ್ದಾರಿಯೂ ಇವಳ ಮೇಲಿತ್ತು.
“ನಾನು ಮದುವೆ ನಂತರನೂ ಕೆಲಸ ಮಾಡವನೆಯ ಮತೆ “
“ಅಡ್ಡಿಲ್ಲ್ಯೆ ನಾ ಎಂತಾ ಬ್ಯಾಡಾ ಹೇಳಿದ್ನನೆ.. ನಾನೂ ಉಡುಪಿಯಲ್ಲೇ ಎಂತಾರು ಬಿಸಿನೆಸ್ ಮಾಡ್ತಿ ಬಿಡು.”
ಅಬ್ಬೇಪಾರಿ ಗಂಡ-ಹಠಮಾರಿ ಹೆಂಡತಿ. ಅಂತೂ ಕಥೆಗೆ ಸುಕಾಂತ್ಯ ಸಿಕ್ಕಿತ್ತು.

 


ಶುಕ್ರವಾರ, ಮಾರ್ಚ್ 7, 2014

ಮೂಗುತಿ ಸುಂದರಿ


ಭಾಗ- ಒಂದು




ಸಂಜೆ ಘಂಟೆ ಏಳಾದರೂ ರವಿಯ ಪತ್ತೆಯೇ ಇಲ್ಲದಾಗ ಕವಿತಾಳ ಕಣ್ಣು ಪದೇ ಪದೇ ಕಿಟಕಿಯಿಂದಾಚೆ ಇಣುಕಲು ಶುರುಮಾಡಿತ್ತು. WhatsApp ನಲ್ಲಿ ಮೆಸೇಜ್ ಕಳಿಸಿದ್ರೂ ರಿಪ್ಲೈ ಇಲ್ಲ.  ಚಡಪಡಿಸಿತ್ತು ಮನಸು. ಆಗಲೇ ಹಾರ್ನ್ ಸದ್ದಾಗಿದ್ದು. ಕವನ ಬರೆದಿದ್ದ ಎರಡು ಹಾಳೆಗಳನ್ನೂ ಎತ್ತಿಕೊಂಡು ಸಂಭ್ರಮದಿಂದ ರಸ್ತೆಯೆಡೆಗೆ ಓಡಿದ್ದಳು ಕವಿತಾ.
ಏ ಇರೇ... ನಾನೂ ಬತ್ತಿ , ನಂಗೂ ರವಿ ಹತ್ರಾ ಮಾತಾಡದಿದ್ದು ಸ್ವಲ್ಪ...." ವೈಶಾಲಿ ಆಲೋವೇರ ಕ್ರೀಮ್ ಹಿಚ್ಚಿಕೊಳ್ಳುತ್ತಲೇ ಕೂಗಿದ್ದಳು.
ಅಲ್ಲಿ ನಿಂಗೆ ಎಂತ ಮಾತಾಡದಿರ್ತೆ ಅವನಹತ್ರೆ ....ಮೆಟ್ಟಿಲ ತುದಿಯಿಂದಲೇ ಕೂಗಿ ಹೇಳಿದ್ದಳು ಕವಿತಾ.
ಕೃಷ್ಣ ಬಂದಿರುವನೆಂದು ತಿಳಿದರೂ ರಾಧೆ ಗೆಳತಿಗಾಗಿ ಕಾಯುವಳೇ ...?? ಕವಿತಾ ರಸ್ತೆ ತಲುಪಿಯಾಗಿತ್ತು.
ಅಂತೂ ಬಂದ್ಯಲಿ , ಇಷ್ಟು ಹೊತ್ತು ಎಂತಕ್ಕಾತು.. ? ಎಲ್ಲಿಗೆ ಹೋಗಿದ್ದೆ..? whatsapp ಅಲ್ಲಿ ಎಂತಕ್ಕೆ ರಿಪ್ಲೈ ಮಾಡಿದ್ದಿಲ್ಲೆ ?” ಒಂದೇ ಉಸಿರಿನಲ್ಲಿ ಹತ್ತು ಪ್ರಶ್ನೆಗಳನ್ನು ಕೇಳಿದ್ದ ಕವಿತಾಳಿಗೆ ರವಿಯಿಂದ ಬಂದಿದ್ದು ಒಂದೇ ಉತ್ತರ
ಹಳೆ ಸ್ಕೂಲ್ ಫ್ರೆಂಡ್ ಸಿಕ್ಕಿದಿದ್ದ , ಮಾತಾಡ್ತಾ ಇದ್ದಿದ್ವಾಪಾ .. ಅದನ್ನೂ ನಿಂಗೆ ಹೇಳವನು ಈಗಾ..
ಬ್ಯಾಡದೋ ನಂಗೆ ಎಂತು ಹೇಳದು ಬ್ಯಾಡ ನೀನು... ನಾ ಎಂತ ಆಗವ ನಿಂಗೆ ?
ಥೋ ಹಂಗಲ್ಲದೆ ಮಾರಾಯ್ತಿ... ಅಷ್ಟಕ್ಕೆಲ್ಲ ಬೇಜಾರು ಮಾಡ್ಕ್ಯಳಡಾ ನೀನು... ತಗ ಡೈರಿ ಮಿಲ್ಕ್ ತಿನ್ನು... ಹಿಡಿ"
ಮುನಿಸಿಕೊಂಡ ಕವಿತಾಳನ್ನು ಸಮಾಧಾನ ಮಾಡುವುದು ರವಿಗೇನು ಹೊಸತಲ್ಲ.

ಕವಿತಾ, ವೈಶಾಲಿ, ರವಿ ಎಲ್ಲರೂ ಒಂದೇ ಊರಿನವರಾದ್ದರಿಂದ ಮೊದಲಿನಿಂದಲೂ ಸ್ನೇಹಿತರು. ಎಲ್ಲರೂ ಎಮ್ ಎಮ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲೇ ಓದುತ್ತಿದ್ದರೂ ವೈಶಾಲಿ  ಮತ್ತು ಕವಿತಾ ಫಸ್ಟ್ ಇಯರ್ ಬಿಎ  ಮತ್ತು ರವಿ ಫೈನಲ್  ಇಯರ್ ಬಿ‌ಎಸ್‌ಸಿ ವಿಧ್ಯಾರ್ಥಿಗಳಾಗಿದ್ದರು. ಕವಿತಾ ಮತ್ತು ವೈಶಾಲಿ ಶಿರಸಿಯಲ್ಲಿ ಆದರ್ಶನಗರದಲ್ಲೇ ರೂಂ ಮಾಡಿಕೊಂಡಿದ್ದರು. ಕವಿತಾ ಹೈ ಸ್ಕೂಲ್ ನಿಂದಲೂ ಕವನ ಬೆರೆಯುದಕ್ಕೆ ಫೇಮಸ್ ಆಗಿದ್ದವಳು. ರವಿಯ ಸ್ನೇಹಿತನೊಬ್ಬ ಸುಧಾ ವಾರಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುದ್ದಿ ತಿಳಿದು , ಹಠ ಹಿಡಿದು ಕವಿತಾಳ ಕವನಗಳನ್ನು ಸುಧಾ ಸಂಪಾದಕರಿಗೆ ಕಳುಹಿಸಿ , ಈಗ ಪ್ರತಿವಾರ ಕವಿತಾಳ ಕವನಗಳನ್ನು ಸುಧಾದಲ್ಲಿ ಪ್ರಕಟಿಸುವಂತೆ ಮಾಡಿದ್ದು ರವಿಯೇ. ಹಾಗಾಗಿ ರವಿ ಅಂದರೆ ಕವಿತಾಳಿಗೆ ಅದೇನೋ ಒಂದು ನೂರು ಗ್ರಾಂ ಹೆಚ್ಚು ಸಲುಗೆ. ಒಳಗೊಳಗೇ ಸಣ್ಣ ಪ್ರೀತಿ.

 ಪ್ರತಿ ಗುರುವಾರ ಕವಿತಾಳ ಕವನಗಳನ್ನು ಪತ್ರಿಕೆಗೆ ತೆಗೆದುಕೊಂಡು ಹೋಗಲು ರವಿಯೇ ಬರುತ್ತಿದ್ದ. ಇಷ್ಟೆಲ್ಲ ಸೇವೆಗೆ ಕಾರಣ ಕವಿತಾಳ ಉದ್ದ ಜಡೆಯ, ಅಷ್ಟೇನೂ ಬೆಳ್ಳಗಿಲ್ಲದ ಮೂಗುತಿ ಸುಂದರಿ ವೈಶಾಲಿ. ವೈಶಾಲಿಯನ್ನು ಕಂಡರೆ ರವಿಗೆ ಮೊದಲಿನಿಂದಲೂ ಒಲವು. ಒಂದು ದಿನ facebook ನಲ್ಲಿ ಚಾಟ್ ಮಾಡುತ್ತಿರುವಾಗ ರವಿಯೇ ಮುಂದಾಗಿ
ಐ ಲೈಕ್ ಯುವರ್ ಸ್ಮೈ ಲ್  ಅಂತ ಕಲಿಸಿದ್ದಕ್ಕೆ ಥ್ಯಾಂಕ್ಯು ಅಂತ ಉತ್ತರ ಬಂದಿತ್ತು. ನಂತರ ಐ ಲೈಕ್ ಯು ಅಂತ ಕಳಿಸಿದ್ದಕ್ಕೆ ಅರ್ಥ ಆಗಿಲ್ಲ "  ಎಂಬ ಉತ್ತರ ಬಂದಾಗ ಇದ್ದೆಲ್ಲಾ ಧೈರ್ಯವನ್ನು ಒಟ್ಟುಗೂಡಿಸಿ ಐ ಲವ್ ಯು ಕಣೆ , ನಾನು ನಿನ್ನ ಪ್ರೀತಿಸ್ತಾ ಇದ್ದಿ " ಎಂದು ಕಳಿಸೇ ಬಿಟ್ಟ. ನಂತರ ಅವಳು ರವಿಯನ್ನು block ಮಾಡಿಬಿಟ್ಟಳು.
ಇಷ್ಟಕ್ಕೆಲ್ಲಾ ಸೋಲುವ ಜಾಯಮಾನವೇ ಅಲ್ಲ ರವಿಯದ್ದು. ಕವನ ತರಲು ಹೋದಾಗೆಲ್ಲ ಲೈನ್ ಹೊಡೆಯುತ್ತ ವೈಶಾಲಿಯನ್ನು ಮಾತಾಡಿಸಿಯೇ ಬರುತ್ತಿದ್ದ.
ಈ ಡ್ರೆಸ್ ಚಂದಿದ್ದಲೇ , ನಿಂಗೆ ರಾಶಿ ಸೂಟ್ ಆಗ್ತು ...
ಆ ಪರ್ಸ್ ಯಾವಾಗ ತಗಂಡ್ಯೆ ... ಜೋರಲೇ ...
ವೈಶಾಲಿಯನ್ನು ಹೊಗಳುವ ಯಾವ ಅವಕಾಶವನ್ನೂ ರವಿ ವ್ಯರ್ಥ ಮಾಡುತ್ತಿರಲಿಲ್ಲ. ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿ ಅನ್ನೋ ರವಿಯ ಪ್ರೀತಿಗೆ ವೈಶಾಲಿ ಮಣಿಯಲೇ ಬೇಕಾಯಿತು. ಮೊದಲು ಕವನ ತೆಗೆದುಕೊಂಡು ಹೋಗಲು ಬಂದಾಗ ವೈಶಾಲಿಯನ್ನು ಮಾತನಾಡಿಸುತ್ತಿದ್ದವನು ಈಗ ಅವಳ ಜೊತೆ ಮಾತನಾಡಲು ಹೋದಾಗ ಕವನ ತೆಗೆದುಕೊಂಡು ಬರುತ್ತಿದ್ದ.

ಇವರಿಬ್ಬರ ಮಧ್ಯೆ ಇಷ್ಟೆಲ್ಲ ನಡೆದರೂ ಕವಿತಾಳಿಗೆ ಏನೂ ಗೊತ್ತಿರಲಿಲ್ಲ. ವೈಶಾಲಿ ಯಾರದ್ದೋ ಜೊತೆ ಇಡೀ ದಿನ ಚಾಟ್ ಮಾಡುತ್ತಿರುತ್ತಾಳೆಂದು ತಿಳಿದಿದ್ದರೂ ಯಾರೆಂದು ಕೇಳುವ ಗೋಜಿಗೆ ಹೋಗಿರಲಿಲ್ಲ. ಹೀಗಿರುವಾಗ ಕವಿತಾಳಿಗೆ ಮನೆಯಲ್ಲಿ ತನ್ನ ಮದುವೆಗೆ ಸಂಬಂಧ ಹುಡುಕುತ್ತಿದ್ದಾರೆಂಬ ವಿಷಯ ತಿಳಿಯಿತು.
ಕೂಸಿಗೆಂತಾ ಇಪ್ಪತ್ತೆರಡು ವರ್ಷ ಆತು ... ಇನ್ನೂ ಮದುವೆ ಮಾಡದೆ ಮನೇಲಿ ಇಟ್ಕಂಬಲ್ಲೆ ಬತ್ತನೇ ಅಜ್ಜಿ ಫರ್ಮಾನು ಹೊರಡಿಸಿದ್ದರು.
“”ಕೊಡ್ಲಾಗದ್ದೆ ರಾಮಚಂದ್ರನ ಮಗಾ ಎಂಜಿನಿಯರ್ ಅಡಾ. ಎಚ್‌ಪಿ ಕಂಪನಿಲಿ  ಕೆಲ್ಸ ಮಾಡ್ತಾ ಇದ್ದನಡಾ . ಒಳ್ಳೆ ಜನ ಬೇರೆಯಾ. ಜಾತಗಾ ಬೇರೆ ಇಪ್ಪತ್ನಾಲಕ್ಕು ಗುಣ ಹೊಂದತಡಾ , ದಣೀ ಪುರೋಹಿತ ಭಟ್ಟರ ಹತ್ರಾ ಜಾತಗಾ ತೋರ್ಸ್ಯ ಬಂಜಿ." ಕವಿತಾಳ ತಂದೆ ಆಗಷ್ಟೇ ಫೋನ್ ಮಾಡಿ ವಿಷಯ ತಿಳಿಸಿದ್ದರು.
ಕವಿತಾಳಿಗೆ ಈಗ ಉಭಯ ಸಂಕಟ. ರವಿ ತನ್ನನು ಪ್ರೀತಿಸುತ್ತಾನೋ ಇಲ್ಲವೋ ಅನ್ನುವುದೇ ಗೊತ್ತಿಲ್ಲ. ಅವನ ಹತ್ತಿರ ತಾನೇ ಹೋಗಿ ಹೇಳಿಕೊಳ್ಳಲೇ ...ಚಡಪಡಿಸುತ್ತಿತ್ತು ಮನಸು. ಕೂತಲ್ಲಿ ಕೂರಲಾಗುತ್ತಿರಲಿಲ್ಲ. ಏನಾದ್ರೂ ಆಗ್ಲಿ ಮೊದಲು ವೈಶಾಲಿಗೆ ಎಲ್ಲ ವಿಷಯ ಹೇಳಿಬಿಡೋಣ ಎಂದು ಮನಸು ಗಟ್ಟಿಮಾಡಿಕೊಂಡಳು.
                                                                              (ಸಶೇಷ....)
                                                                                                                
ಮೂಗುತಿ ಸುಂದರಿ ಭಾಗ - 2 ಇಲ್ಲಿದೆ http://vasukihegde.blogspot.in/2014/03/2.html